Nambide Ninnaya Paada 

ಶ್ರೀವಿಜಯದಾಸರ ಕೃತಿ 

 ನಂಬಿದೆ ನಿನ್ನಯ ಪಾದ ಮುಖ್ಯಪ್ರಾಣ 

 ನಂಬಿದೆ ನಿನ್ನಯ ಪಾದ ॥ ಪ ॥ 

 ನಂಬಿದೆ ನಿನ್ನಯ ಪಾದಾಂಡಬರ ತೊಲಗಿಸಿ 

 ಡಿಂಬದೊಳಗೆ ಹರಿಯ ಬಿಂಬ ಪೊಳೆವಂತೆ ಮಾಡೋ ॥ ಅ ಪ ॥ 


( ಶ್ರೀಗುರುವಿಜಯವಿಟ್ಠಲ ಎಂಬಲ್ಲಿ ' ಶ್ರೀ ' ಎಂದರೆ ಲಕ್ಷ್ಮೀದೇವಿಗೆ ' ಗುರು ' ಜ್ಞಾನಸ್ಫೂರ್ತಿದಾಯಕನಾದ, ವಿಜಯವಿಟ್ಠಲ ಎಂದು ಅರ್ಥ. ' 


ಶ್ರೀಯೋऽಪಿ ಚ ಜ್ಞಾನ ಸ್ಫೂರ್ತಿಸ್ಸದಾ ತಸ್ಮೈ ಹರಯೇ ಗುರುವೇ ನಮಃ' ಎಂಬ ಪ್ರಮಾಣವನ್ನು ಗಮನಿಸಿ ಶ್ರೀವಿಜಯದಾಸಾರ್ಯಕೃತವಿದೆಂದೇ ತಿಳಿದರೆ ಸರಿ. ಚಿಪ್ಪಗಿರಿಯ ಮೂಲಪ್ರತಿಯಲ್ಲಿ ಈ ಪದ ಶ್ರೀವಿಜಯದಾಸಾರ್ಯರ ಪದಗಳ ಜೊತೆಯಲ್ಲೇ ಇದೆ. ಗುರುವಿಜಯರಾಯರ ಅಂದರೆ ಶ್ರೀಮೊದಲಕಲ್ಲು ಶೇಷದಾಸರ ಕೃತಿಸಂಗ್ರಹದ ಮೂಲಪ್ರತಿಯಲ್ಲಿ ಈ ಪದವಿಲ್ಲ.)


ಆಡಂಬರ ತೊಲಗಿಸಿ = ಡಾಂಭಿಕ ನಡವಳಿಕೆಗಳನ್ನು ಬಿಡಿಸಿ; ಡಿಂಬದೊಳಗೆ = ದೇಹದಲ್ಲಿ (ಈ ಸಾಧನದೇಹದಲ್ಲಿಯೇ ಶ್ರೀಹರಿಯ ಅಪರೋಕ್ಷವಾಗುತ್ತದೆ - ಸಾಧನಪೂರ್ತಿಯ ನಂತರ, ಶ್ರೀಭಾರತೀಶನ ಅನುಗ್ರಹದಿಂದ); ಬಿಂಬ ಪೊಳೆವಂತೆ = ಬಿಂಬರೂಪಿ ಶ್ರೀಹರಿಯು ಪ್ರಕಾಶಿಸುವಂತೆ (ಪ್ರತ್ಯಕ್ಷತೋರುವಂತೆ).


 ಇಪ್ಪತ್ತು ಒಂದು ಸಾವಿರ ಐದೊಂದು ನೂರು 

 ಅಪ್ರತಿ ಹಂಸಮಂತ್ರ । 

 ತಪ್ಪದೆ ದಿನದಿನ ಒಪ್ಪದಿಂದಲಿ ಜಪಿಸಿ 

 ತಪ್ಪಿಸೊ ಭವವ ಸಮ್ಮಿಪ್ಪದ ಜೀವರಿಗೆ ॥ 

 ಅಪ್ಪನಂದದಿ ಪುಣ್ಯವಪ್ಪಂತೆ ಕರುಣಿಸೊ 

 ಕಪ್ಪುವರ್ಣನ ಕೂಡಪ್ಪಿಸಿ ಪಾಲಿಸೊ ॥ 1 ॥ 


 ಇಪ್ಪತ್ತು ಒಂದುಸಾವಿರ ಐದೊಂದು ನೂರು = ೨೧,೬೦೦; ಅಪ್ರತಿ ಹಂಸಮಂತ್ರ = ಅಸದೃಶವಾದ ಹಂಸಮಂತ್ರವನ್ನು (' ಹಂಸಃಸೋऽಹಂ ಸ್ವಾಹಾ '; ಹಂಸಃ = ನಿರ್ದೋಷಿಯಾದ ಶ್ರೀಹರಿಯೇ, ನನ್ನ ಅಂತರ್ಯಾಮಿಯು - ಆತನಿಗೇ ನನ್ನನ್ನು ಸಮರ್ಪಿಸಿದ್ದೇನೆ, ಎಂಬರ್ಥದ ಮಹಾಮಂತ್ರ;) ತಪ್ಪದೆ = ಯಾವ ಕಾರಣದಿಂದಲೂ, ಎಂದೂ ಬಿಡದೆ; ದಿನದಿನದಿ = ಪ್ರತಿದಿನವೂ; ಒಪ್ಪದಿಂದಲಿ = ಒಪ್ಪವಾಗಿ (ಶ್ರೀಹರಿಪ್ರೀತಿಯಾಗುವಂತೆ); ಸಮ್ಮಿಪ್ಪದ ಜೀವರಿಗೆ = ನಿನ್ನನ್ನು ಭಕ್ತಿಯಿಂದ ಸೇವಿಸುವವರಿಗೆ; ಅಪ್ಪನಂದದಿ = ತಂದೆಯಂತೆ (ಪುತ್ರವಾತ್ಸಲ್ಯದಿಂದ); ಪುಣ್ಯವಪ್ಪಂತೆ = ಪುಣ್ಯವೇ ದೊರೆಯುವಂತೆ (ಸತ್ಕರ್ಮಗಳೇ ಸಂಭವಿಸುವಂತೆ); ಕಪ್ಪುವರ್ಣನ ಕೂಡಪ್ಪಿಸಿ ಪಾಲಿಸೋ = ಶ್ರೀಕೃಷ್ಣನ ಸನ್ನಿಧಿಗೆ ಒಯ್ದು (ಕೃಷ್ಣಾನುಗ್ರಹಪಾತ್ರನಾಗುವಂತೆ ಮಾಡಿ) ಕಾಪಾಡು.


 ಹತ್ತೇಳು ಎರಡು ಯುತ ಸಾವಿರ ನಾಡಿ 

 ಸುತ್ತಿ ಸೂತ್ರಮಾರುತ । 

 ಉತ್ತರ ಲಾಲಿಸೊ ಉತ್ಕ್ರಮಣದಲ್ಲಿ 

 ನೆತ್ತಿಯ ದ್ವಾರದಿಂದಲೆತ್ತ ಪೋಗಲೀಸದೆ ॥ 

 ತತ್ತುವರೊಳು ಜೀವೋತ್ತಮನೆ ಸತ್ - 

 ಚಿತ್ತೆನಗೆ ಕೊಡು ಉತ್ತರ ಧರಿಸೋ ॥ 2 ॥ 


 ಹತ್ತೇಳು ಎರಡು ಯುತ ಸಾವಿರ ನಾಡಿ = (10×7=70+2=72×1000=72000) ಎಪ್ಪತ್ತೆರಡು ಸಾವಿರ ನಾಡಿಗಳಲ್ಲಿ ( ಯುತ = ಕೂಡಿಸಿದ); ಸುತ್ತಿ = ಸುತ್ತುತ್ತುಲೇ ಇದ್ದು; ಸೂತ್ರಮಾರುತ = ಸೂತ್ರನಾಮಕಪ್ರಾಣ; ಉತ್ತರ ಲಾಲಿಸು = ನನ್ನ ಮುಂದಿನದನ್ನು (ಮುಂದಿನ ಅಪೇಕ್ಷೆಯನ್ನು)ಕಿವಿಗೊಟ್ಟು ಕೇಳು; ಉತ್ಕ್ರಮಣದಲ್ಲಿ = ನಾನು ಈ ದೇಹವನ್ನು ಬಿಟ್ಟು ಹೋಗುವ ಸಮಯದಲ್ಲಿ; ನೆತ್ತಿಯ ದ್ವಾರದಿಂದಲೆ = ಬ್ರಹ್ಮರಂಧ್ರದಿಂದಲೇ; ಎತ್ತ ಪೋಗಲೀಸದೇ (ಅನ್ಯಮಾರ್ಗದಿಂದ) ಹೊರಡುವುದಕ್ಕೆ ಅವಕಾಶಕೊಡದೆ (ಬ್ರಹ್ಮರಂಧ್ರದಿಂದ ಹೊರಟವರೇ ತಿರುಗಿ ಸಂಸಾರಕ್ಕೆ ತರದ ಅರ್ಚಿರಾದಿಮಾರ್ಗದಲ್ಲಿ ಹೋಗುತ್ತಾರೆಂಬ ನಿಯಮವು ಸೂಚಿತವಾಗಿದೆ); ತತ್ತುವರೊಳು = ತತ್ವಾಭಿಮಾನಿ ಜೀವರಲ್ಲಿ (ದೇವತೆಗಳೂ ಜೀವರೇ); ಸತ್ ಚಿತ್ ಎನಗೆ ಕೊಡು = ಒಳ್ಳೆಯ ಜ್ಞಾನ ಕೊಡುತ್ತ (ಸುಖದುಃಖಗಳಿಗೆ ಒಳಗಾಗದ ಸಮಚಿತ್ತತ್ವವನ್ನು ನನಗೆ ಅನುಗ್ರಹಿಸು); ಉತ್ತರ ಧರಿಸೋ = ಶ್ರೇಷ್ಠವಾದುದನ್ನು ದೊರಕಿಸು.


 ಅಂತರಂಗದ ಉಸಿರ ಹೊರಗೆ ಬಿಟ್ಟು 

 ಅಂತರಂಗಕ್ಕೆ ಸೇದುವ । 

 ಪಂಥದೊಳು ನೀನೆ ಕಂತುಜನಕನಲ್ಲಿ 

 ಮಂತ್ರಿಯೆನೆಸಿ ಸರ್ವರಂತರ್ಯಾಮಿ ಆಗಿ ॥ 

 ನಿಂತು ನಾನಾಬಗೆ ತಂತು ನಡಿಸುವ 

 ಹೊಂತಕಾರಿ ಗುಣವಂತ ಬಲಾಢ್ಯ ॥ 3 ॥ 


 ಅಂತರಂಗದ ಉಸಿರ = ಒಳಗಿನ ಉಸಿರನ್ನು (ಶ್ವಾಸವಾಯುವನ್ನು); ಹೊರಗೆ ಬಿಟ್ಟು = ನಿಚ್ಛ್ವಾಸದಿಂದ ಹೊರಗೆ ಹಾಕಿ; ಅಂತರಂಗಕ್ಕೆ ಸೇದುವ = (ಪುನಃ)ಉಚ್ಛ್ವಾಸದಿಂದ ಉಸಿರನ್ನು (ವಾಯುವನ್ನು) ಒಳಗೆ ತೆಗೆದುಕೊಳ್ಳುವ; ಪಂಥದೊಳು = ಈ ಮಾರ್ಗದಲ್ಲಿ; ಕಂತುಜನಕನಲ್ಲಿ = ಮನ್ಮಥಪಿತನಲ್ಲಿ (ಶ್ರೀಕೃಷ್ಣನಲ್ಲಿ); ಮಂತ್ರಿ ಎನಿಸಿ = ಮುಖ್ಯಮಂತ್ರಿಪದದಲ್ಲಿದ್ದು; ಸರ್ವಾಂತರ್ಯಾಮಿಯಾಗಿ = ಸರ್ವರ ಒಳಗಿದ್ದು; ನಾನಾಬಗೆ ತಂತು ನಡಿಸುವ = ವಿವಿಧಕರ್ಮಸಂತತಿಯನ್ನು; ಹೊಂತಕಾರಿ = ಚತುರ.


 ಪಂಚಪರಣರೂಪನೆ ಸತುವಕಾಯ 

 ಪಂಚಾದ್ರಿಗಳ ಲೋಪನೆ । 

 ಮುಂಚಿನ ಪರಮೇಷ್ಠಿ ಸಂಚಿತಗಾಮಿ ಬಿಡಿಸಿ 

 ಕೊಂಚ ಮಾಡೊ ಪ್ರಾರಬ್ಧ ॥ 

 ವಂಚನೆ ಗೈಸದೆ ಅಂಚಂಚಿಗೆ ಪರಪಂಚವೆ ಓಡಿಸಿ 

 ಪಂಚವಕ್ತ್ರಹರಿಮಂಚದ ಗುರುವೆ ॥ 4 ॥ 


 ಪಂಚಪರಣರೂಪನೆ = (ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನಗಳೆಂಬ) ಐದು ರೂಪಗಳಿಂದ (ಪಂಚ ತನ್ನಾಮಕ ದಾಸಪ್ರಾಣರಲ್ಲಿ) ಇರುವ ಪ್ರಾಣ (ಪರಣ = ಪ್ರಾಣ); ಸತ್ವಶರೀರ = (ಬ್ರಹ್ಮವಾಯುಗಳ ಪ್ರಾಕೃತಶರೀರವು) ಶುದ್ಧ ಸತ್ತ್ವಾತ್ಮಕವಾದುದು (' ಸತ್ವಸತ್ವಮಹಾಸತ್ವಸೂಕ್ಷ್ಮ ಸತ್ವಶ್ಚತುರ್ಮುಖಃ ' - ಇತ್ಯಾದಿ ಪ್ರಮಾಣದಂತೆ); ಪಂಚಾದ್ರಿಗಳ ಲೋಪನೆ = ತಮಸ್ಸು, ಮೋಹ, ಮಹಾಮೋಹ, ತಾಮಿಸ್ರ, ಅಂಧತಾಮಿಸ್ರ ಇವುಗಳಿಂದ ದೂರನೆ (ಇವುಗಳು ಬಹುದೊಡ್ಡ ಪರ್ವತಗಳ ಸದೃಶವಾದ ಅವಿದ್ಯಾ); ಮುಂಚಿನ ಪರಮೇಷ್ಠಿ = ಭಾವೀಬ್ರಹ್ಮದೇವ; (ಮುಂಚಿನ = ಮುಂದಿನ ಕಲ್ಪದ); ಸಂಚಿತಾಗಾಮಿ ಬಿಡಿಸಿ = ಸಂಚಿತ ಆಗಾಮಿಕರ್ಮಗಳು ಲೇಪಿಸದಂತೆ ಮಾಡಿ (ಅಪರೋಕ್ಷ ದರ್ಶನದಿಂದ ಸಂಚಿತಕರ್ಮ ಕ್ಷಯವೂ, ಆಗಾಮಿ (ಆ ಮುಂದಿನ) ಕರ್ಮಗಳ ನಿರ್ಲೇಪವೂ ಲಭಿಸುತ್ತದೆ); ಕೊಂಚ ಮಾಡೊ ಪ್ರಾರಬ್ಧ = ಭೋಗಿಸಲೇಬೇಕಾದ ಪ್ರಾರಬ್ಧಕರ್ಮವನ್ನು ಉಪಮರ್ದದಿಂದ ಕಡಿಮೆ ಮಾಡು; ವಂಚನೆಗೈಸದೆ = (ನನ್ನನ್ನು ಸಂಸಾರದಲ್ಲಿಯೇ ಇಟ್ಟು) ವಂಚಿಸದೇ; ಅಂಚಂಚಿಗೆ = ಕಡೆ ಕಡೆಗೆ (ಸಾಧನೆಯಲ್ಲಿ ಮುಂದೆ ಕರೆದೊಯ್ದಂತೆ); ಪರಪಂಚಗಳೋಡಿಸಿ = ಹರಿವಿಸ್ಮಾರಕವಾದ ಶಬ್ದ, ರೂಪ,ರಸ, ಗಂಧ, ಸ್ಪರ್ಶ ಎಂಬ ತನ್ಮಾತ್ರಗಳ ಸಂಬಂಧತೊಲಗಿಸಿ; ಪಂಚವಕ್ತ್ರ ಹರಿಮಂಚದ ಗುರುವೆ = ರುದ್ರದೇವ ಮತ್ತು ಶೇಷದೇವ ಇವರಿಗೆ ಗುರುವಾದ ಹೇ ಮುಖ್ಯಪ್ರಾಣ! (ಶೇಷದೇವನು ಹರಿಯ ಮಂಚ - ಶಯ್ಯಾರೂಪನು).


 ಯೋಗಾಸನದೊಳಿಪ್ಪ ಯಂತ್ರೋದ್ಧಾರ 

 ಭಾಗವತ - ರಪ್ಪ । 

 ಯೋಗಿಗಳೀಗೀಶವ್ಯಾಸಯೋಗಿಗೊಲಿದ ನ್ಯಾಸ 

 ಶ್ರೀತುಂಗಭದ್ರಾವಾಸ ಬಾಗುವೆ ಕೊಡು ಲೇಸ ॥ 

 ಶ್ರೀಗುರುವಿಜಯವಿಟ್ಠಲನ ಪಾದಕೆ 

 ಬಾಗುವ ಭವದೂರ ಜಾಗರಮೂರುತಿ ॥ 5 ॥ 


 ಯೋಗಾಸನದೊಳಿಪ್ಪ = ಯೋಗಾಸನದಲ್ಲಿ ಸ್ಥಿತನಾದ; ಯಂತ್ರೋದ್ಧಾರಕ ಭಾಗವತರಪ್ಪ = ಹರಿಭಕ್ತರ ತಂದೆಯಾದ ಹೇ ಯಂತ್ರೋದ್ಧಾರಕ ಮುಖ್ಯಪ್ರಾಣ! (ಪಂಪಾಕ್ಷೇತ್ರದಲ್ಲಿರುವ ಯಂತ್ರೋದ್ಧಾರಕ ಪ್ರಾಣದೇವರು); ವ್ಯಾಸಯೋಗಿಗೊಲಿದ = ಶ್ರೀವ್ಯಾಸತೀರ್ಥರಿಗೆ ಒಲಿದ (ಪ್ರಸನ್ನನಾದ); ನ್ಯಾಸ = (ಅವರಿಂದ) ಪ್ರತಿಷ್ಠಾಪಿತವಾದ ಸ್ಥಿತಿಯುಳ್ಳ; ಶ್ರೀತುಂಗಭದ್ರಾವಾಸ = ಪವಿತ್ರವಾದ ತುಂಗಭದ್ರಾತೀರದಲ್ಲಿರುವ; ಬಾಗುವೆ = (ನಿನ್ನ ಪಾದಗಳಲ್ಲಿ) ಶಿರಸಾನಮಿಸುವೆ; ಬಾಗುವ = (ಶ್ರೀಹರಿಯಲ್ಲಿ) ನಮ್ರನಾಗಿ ಅವನ ಪಾದದಲ್ಲಿ ಬಾಗಿದ ಶಿರವುಳ್ಳ; ಜಾಗರಮೂರುತಿ = ನಿತ್ಯಜಾಗ್ರತನಾದವ (ಶ್ರೀವಾಯುದೇವನು ನಿದ್ರಾರಹಿತನು).


 ವ್ಯಾಖ್ಯಾನ : 

 ಕೀರ್ತಿಶೇಷ ಮಾಧ್ವಭೂಷಣ ದಿ॥ ಶ್ರೀ ಬಿ. ಭೀಮರಾವ್ , ದಾವಣಗೆರೆ.

Comments

Popular posts from this blog

Kaksha Taratamya