PONDI BHAJISO SATATA ONDE MANADI
ಶ್ರೀ ಶ್ಯಾಮಸುಂದರವಿಠಲ ದಾಸಾರ್ಯ ವಿರಚಿತ
ಶ್ರೀ ಜಗನ್ನಾಥದಾಸರ ಸ್ತೋತ್ರ ಸುಳಾದಿ
ರಾಗ ಹಂಸಧ್ವನಿ ಧ್ರುವತಾಳ
ಮಂದಿರ ಮಾನವಿ ದಾಸಾರ್ಯರಾ
ಮಂದಮಾನವ ಕೇಳೋ ವಂದಿಸಿ ಸೇವಿಪರ
ಬಂಧನ ಪರಿಹರಿಸಿ ಮನದಭೀಷ್ಟಾ
ತಂದು ಕೊಡುವದಕ್ಕೆ ಮಂದಾರ ಕುಜದಂತೆ
ಬಂದಿಲ್ಲಿ ನಿಂದಿಹ್ಯರೆಂದು ತಿಳಿಯೋ
ಛಂದಾಗಿ ಇವರು ದಯದಿ ಕಣ್ದೆರೆದು ನೋಡಿದರೆ
ಬೆಂದು ಪೋಪವು ದೋಷವೃಂದವೆಲ್ಲಾ
ಕಂದನು ಮಾಡಿದ ಕುಂದು ಕ್ಷಮಿಸಿ ತಾಯಿ
ತಂದೆ ಸಲಹುವಂತೆ ರಕ್ಷಿಸುವರೋ
ಹಿಂದೆ ಸಲ್ಹಾದ ಶಲ್ಯರೆಂದೆನಿಸುತ ಪು -
ರಂದರ ಗುರು ಸ್ವಾದಿರಾಜರ ಪ್ರೀತ
ಸಿಂಧೂರವರದ ಶ್ಯಾಮಸುಂದರ ನಾಜ್ಞದಿ
ಇಂದುವಿನಂತೆ ಮೂಡಿ ಪುನಃ ಜಗದಿ ॥ 1 ॥
ಮಟ್ಟತಾಳ
ತ್ವರವಾಟದಿ ಜನಿಸಿ ವರದೇಂದ್ರರನೊಲಿಸಿ
ಮರುತಾಗಮ ಘಳಿಸಿ ತುರುರಕ್ಷಕ ದಾಸ -
ವರ್ಯರ ಕರುಣದಲಿ ಶರಧಿಜ ಭಾಗದಲಿ
ಧರಣಿಪ ವಿಠಲೆಂಬೋ ಸುರುಚರದಂಕಿತವ
ದೊರಕಿಸಿ ಪ್ರಾಕೃತದಿ
ಕರುಣಾಕರ ಶ್ಯಾಮಸುಂದರನ ವರ್ಣಿಸಿದಾ
ಪರಮ ಭಾಗವತರ ನೆರೆನಂಬು ನಿರುತಾ ॥ 2 ॥
ತ್ರಿವಿಡಿತಾಳ
ಇವರ ಸಂದರುಶನ ಭವಬಂಧ ಮೋಚನ
ಇವರ ಚರಣ ಧ್ಯಾನ ಗಂಗಾ ಸ್ನಾನ
ಇವರನ್ನ ಸಾರಿದರೆ ಜವನ ಅಂಜಿಕೆಯಿಲ್ಲ
ಇವರ ಕವನ ಸ್ತವನ ಶ್ರವಣದಿಂದ
ಪವನ ಸಚ್ಛಾಸ್ತ್ರದ ಪ್ರವಚನ ಫಲವಕ್ಕು
ಇವರಿದ್ದ ಸ್ಥಳ ಕಾಶೀರಾಮೇಶ್ವರ
ಇವರಲ್ಲಿ ಸಮಸ್ತ ದಿವಿಜರು ನೆಲೆಸಿದ್ದು
ಇವರಂದ ವಚನವ ನಡೆಸುವರು
ಇವರಿಲ್ಲಿರಲು ಬಿಟ್ಟು ಅವನಿ ಸುತ್ತಿದರವಗೆ
ಲವಲೇಶವಾದರೂ ಪುಣ್ಯವಿಲ್ಲ
ಇವರನುಗ್ರಹವಾಗೆ ಶ್ರೀಶ್ಯಾಮಸುಂದರನು
ತವಕದಿ ಕರಪಿಡಿದು ಸಲಹುವ ಸಂತತಾ ॥ 3 ॥
ಅಟ್ಟತಾಳ
ಧಾರುಣಿಸುರರ ಉದ್ಧಾರಗೋಸುಗವಾಗಿ
ಮೂರೆಂಟು ಈರಾರು ಚಾರುಲಕ್ಷಣವುಳ್ಳ
ಭಾರತೀಪತಿಯಂತೆ ತೋರುವ ಕಾಯುವ
ಶೌರಿ ಕಥಾಮೃತಸಾರ ಸುಗ್ರಂಥವಾ
ತಾ ರಚಿಸಿದ ಉಪಕಾರವು ವರ್ಣಿಸ -
ಲಾರಿಂದ ಸಾಧ್ಯವು ಪಾರಾಯಣ ಪ್ರತೀ -
ವಾರ ಬಿಡದೆ ಮಾಡೆ ಸಾರಲೇನು ಸಂ -
ಸಾರ ಶರಧಿಯಿಂದ ಪಾರಾಗಿ ಸದ್ಭಕ್ತಿ
ಪಾರಮಾರ್ಥಿಕ ಜ್ಞಾನ ವೈರಾಗ್ಯ ಪಡೆವುತ
ನಾರದನಮಿತ ಶ್ರೀಶ್ಯಾಮಸುಂದರನ ಹೃ -
ದ್ವಾರಿಜದೊಳು ಕಂಡು ಸೂರೆಗೊಂಬುವ ಸುಖಾ ॥ 4 ॥
ಆದಿತಾಳ
ಈತನ ಭಜಿಸಲು ಯಾತನೆಗಳು ಇಲ್ಲ
ಈತನ ಸೇರಲು ಯಾತರ ಭೀತಿಯು
ಈತನ ಹೊರತಿನ್ನು ದಾತರು ನಮಗಿಲ್ಲ
ಈತನೆ ರಕ್ಷಕ ಈತನೆ ತಾಯಿತಂದೆ
ಈತನೆ ಸದ್ಗುರು ಈತನೆ ಗತಿಪ್ರದ
ಈತನೆ ಮೂಕಗೆ ಮಾತು ನುಡಿಸಿದಾತ
ಈತನ ಭಕುತಿಗೆ ಸೋತು ಎರಡು ವ್ಯಾಳೆ
ವಾತಾಂತರ್ಗತ ನಮ್ಮ ಶ್ಯಾಮಸುಂದರವಿಟ್ಠಲ
ಪ್ರೀತಿಯಿಂದಿವರಿಗೆ ಮೃಷ್ಟಾನ್ನ ವುಣಿಸಿದಾ ॥ 5 ॥
ಜತೆ
ಈ ಮಹಾಮಹಿಮರ ಪ್ರೇಮ ಪಡೆವರನ್ನ
ಶ್ಯಾಮಸುಂದರ ಸ್ವಾಮಿ ಸತತ ಪೊರೆವಾ ॥
Comments
Post a Comment