TATWABHIMANI DEVATEGALA SULADI
ತತ್ವಾಭಿಮಾನಿ ದೇವತೆಗಳ ಸುಳಾದಿ
ಧ್ರುವತಾಳ:
ನಮೋನಮೋ ಸಮಸ್ತ ತತ್ವಾಭಿಮಾನಿಗಳಿರಾ ನಿಮಗೆ ಹಸ್ತವ ಮುಗಿದು ಕೊಂಡಾಡುವೆ ಕ್ರಮದಿಂದ ಬಿನ್ನಪವ ಲಾಲಿಸಿ ಕೇಳುವುದು ಅಮರ ನಿಮ್ನಗ ಮಜ್ಜನ ಗೋಸುಗ ಅಮಲಮತಿ ಇತ್ತು ಜ್ಞಾನ ಭಕ್ತಿಯಿಂದ ರಮೆಯರಸನ್ನ ನೋಳ್ಪಸಾಧನ ತೋರಿ ಗಮನಾದಿ ಮೊದಲಾದ ವ್ಯಾಪಾರ ನಿಮ್ಮಾಧೀನ ಶ್ರಮ ಸಾದ್ಯವಾಗದಂತೆ ಪೈಣವಿತ್ತು ತಮೊರಜೊಗುಣದವರ ಬಾಧಿಯ ತಪ್ಪಿಸಿ ಉತ್ತಮ ಯಾತ್ರಿ ಮಾಡಿಸುವುದು ತ್ರಯ ಕ್ಷೇತ್ರದ ಕುಮತ ಪೊಂದಿದ ನಿತ್ಯ ಕುಮತಿಜನರ ಸಂಗ ನಿಮಿಷವಾದರೂ ಕೊಡದೆ ಪಾಲಿಸಬೇಕು ಯಮನೇಮ ಮಿಗಿಲಾದ ಸತ್ಕರ್ಮಾಚಾರದಿಂದ ಸಮಚಿತ್ತ ಭೇದದಿಂದ ಇರಲಿ ಎನಗೆ ನಮೋನಮೋ ಸಮಸ್ತ ತತ್ವಾಭಿಮಾನಿಗಳಿರಾ ಕುಮತಿಯ ಬಿಡಿಸುವದು ನಾನೆಂಬೊ ಮಾತಿನಲ್ಲಿ ಭ್ರಮಣವಲ್ಲದೆ ಲೇಸುಲೇಸ ಕಾಣೆ ರಮೆಯರಸ ನಮ್ಮ ವಿಜಯವಿಠ್ಠಲನಂಘ್ರಿ ಕಮಲ ಹೃತ್ಕಮಲದಲ್ಲಿ ಪೊಳೆವಂತೆ ಕೃಪೆ ಮಾಡಿ ||೧||
ಮಟ್ಟತಾಳ:
ತನುವೆನ್ನದೆಂಬೆನೆ ತನುವೆನ್ನದಲ್ಲ ಮನವೆನ್ನದೆಂಬೆನೆ ಮನವೆನ್ನದಲ್ಲ ಧನವೆನ್ನದೆಂಬೆನೆ ಧನವೆನ್ನದಲ್ಲ ಜನವೆನ್ನದೆಂಬೆನೆ ಜನವೆನ್ನದಲ್ಲ ತನು ಮನ ಧನ ಜನವು ಅನುದಿನದಲ್ಲಿ ನೋಡೆ ವನಜಭವಾದಿಗಳೇ ಎಣಿಸಿ ಪೇಳುವುದೇನು ಕೊನೆ ಮೊದಲು ನಿಮ್ಮಾಧೀನವಯ್ಯಾ ಬಿಡದೆ ಇನಿತು ಪೊಂದಿರಲಿಕ್ಕೆ ಮಣಿದು ಹೇಳುವ ಮಾತಿನ ಉಪಚಾರವ್ಯಾತಕೆ ಘನ್ನಮೂರುತಿ ನಮ್ಮ ವಿಜಯವಿಠ್ಠಲನ್ನ ಪ್ರೇರಣೆಯಿಂದಲಿ ನಿಮ್ಮ ಸಕಲ ಚೇಷ್ಟಪ್ರದವೋ ||೨||
ತ್ರಿವಿಡಿತಾಳ:
ಭೀತಿಪ್ರದ ಜೀವಜಡಗಳೆಲ್ಲ ನಿಮ್ಮ ಚಾತುರ್ಯ ಪ್ರೇರಣೆ ಸಿದ್ದವಾಗಿರಲಿಕ್ಕೆ ಭೂತಳದೊಳು ನಾನಾಯಾತ್ರಿ ಚರಿಸುವಾಗ ಭೀತಿ ಬಡಲ್ಯಾಕೆ ತಾತ್ವಿಕರೇ ದೈತ್ಯರಗಣದಿಂದ ಇಂತಾಗುವುದಲ್ಲ ಪ್ರೀತಿವಂತರು ನೀವು ನಾನನ್ಯನೇ ಜಾತಕರ್ಮಾರಭ್ಯ ಅಂದಿನ ಪರಿಯಂತ ಯಾತಕಾಲೋಚನೆ ಸರ್ವರಿರಲು ಆತುಮದೊಳಗೆ ಸತ್ವರಾಜಸ ತಾಮಸ ಗಾತುರ ಗೋಳಕ ನಿಮ್ಮ ದೇಹ ಈ ತೆರದಲಿ ಮೂರು ವಿಧವಾಗಿ ಸಮಸ್ತ ಭೂತದೊಳಗೆ ನೀವು ಪೊಂದಿರಲು ಭೀತಿ ಎನಗೆ ಉಂಟೆ ಎಲ್ಲಿದ್ದರು ಕೇಳಿ ಮಾತ್ರಕಾಲವಾಗಿ ಬಲು ಸೌಖ್ಯವೇ ಗೋತುರತರುಗುಹ ವನಾರಣ್ಯ ಪೊದೆಮಿಕ್ಕ ಭೀತಿಗಳಿರಲೇನು ನಿಮ್ಮ ಬಲವು ಸ್ವಾತಂತ್ರ ಪುರುಷ ಶ್ರೀ ವಿಜಯವಿಠಲರೇಯನ ದೂತನಾದವನಿಗೆ ಭಯವಿಲ್ಲ ಭಯವಿಲ್ಲ ||೩||
ಅಟ್ಟತಾಳ:
ದೇಶ ಕಾಲ ಕರ್ಮಗುಣ ವಿಚಾರಾಚಾರ ಭಾಷೆ ರೂಪ ಕ್ರಿಯಾ ಭೇದವಾದರೇನು ದೋಷದೂರರೆ ನೀವು ತತ್ತತ್ ಸ್ಥಾನದಲ್ಲಿ ವಾಸವಾಗಿದ್ದು ನಂಬಿದ ಜನರ ಮನೋಪಾಸನೆ ಪ್ರಕಾರದಲ್ಲೀಸುತಿರಲಿಕ್ಕೆ ಏಸುಬಗೆಯಿಂದ ಚಿಂತಿಸೆ ಸಲ್ಲದು ಈ ಶರೀರವೇ ನಿಮ್ಮ ಚರಣಕ್ಕೆ ಅರ್ಪಿಸಿ ದಾಸದಾಸನೆಂದು ತಲೆವಾಗಿ ಕೊಂಡಿಪ್ಪೆ ಲೇಸು ಹೊಲ್ಲೆಗಳೆಲ್ಲ ನೀವಿತ್ತದಹುದು ದೇಶ ಕಾಲಾದಿಯ ಗೊಡಿವೆ ಎನಗೆ ಯಾಕೆ ಭಾಸುರ ಕೀರ್ತಿ ಅಪಕೀರ್ತಿ ನಿಮ್ಮದೇ ಸರಿ ಈಸು ದಿವಸ ನಾನು ಬದುಕಿದಕೆ ಎನ್ನಾಶೆ ಸಿದ್ಧಿಸಲಿ ಉತ್ತಮರ ಸಂಗತಿಯಿಂದ ಕೋಶ ಭಂಡಾರಾದಿ ಐಹಿಕ ಬೇಡುವುದಿಲ್ಲ ಸಾಸಿರಕ್ಕೆ ನಿಮ್ಮ ಪ್ರಸಾದವಾಗಲಿ ಸಾಸಿವೆ ಕಾಳಷ್ಟು ನಿಮ್ಮವಿನಾವಾಗಿ ದ್ವೇಷ ದೂಷಣೆ ಸ್ನೇಹಮಾಡುವರೆ ಇಲ್ಲಾ ಲೇಶ ಕಾಲದಿಂದ ಮಹಕಾಲ ಪರ್ಯಂತ ಈಶನೊಬ್ಬನೇ ಕಾಣೊ ಸರ್ವರ ಪ್ರೇರಕ ಕಾಶಿಪುರಾಧೀಶ ವಿಜಯವಿಠಲ ಸರ್ವೇಶನ ತೋರಿಸಿ ಕೊಡುವುದು ಸರ್ವದಾ ||೪||
ಆದಿತಾಳ:
ಶರಣು ಜಯಂತ ಮಿತ್ರ ಮನು ಪ್ರಾಣ ಧರುಣಿ ವರುಣ ಮರುತಬಾಂಧವ ವಾಯು ಗಣಪ ಪಂಚಮರುತ ತರಣಿ ದಿಗ್ದೇವ ದಕ್ಷ ಅಶ್ವಿನಿಯರು ಇಂದ್ರ ಹರ ಶೇಷ ಗರುಡ ವಾಯು ಬ್ರಹ್ಮ ಲಕುಮಿದೇವಿಯರು ಪರಮ ಕರುಣದಿಂದ ಪ್ರತಿ ಪ್ರತಿ ದಿನದಲ್ಲಿ ಪೊರೆವುತ್ತ ಬರುವುದು ಭಕ್ತಗೆ ಒಲಿದು ಎಲ್ಲ ಚಿರಕಾಲದಲಿ ನಿಮ್ಮ ಸ್ಮರಣೆ ಪಾಲಿಸಿ ಪುಣ್ಯ ಶರಧಿಯೊಳಿಡುವುದು ಹರಿ ಮೆಚ್ಚುವಂತೆ ಎನ್ನ ಕರಚರಣಾದಿಗಳಲ್ಲಿ ವ್ಯಾಪಾರ ನಿಮ್ಮದು ಹಿರಿದಾಗಿ ಪೇಳುವುದೇನು ತಾತ್ವಿಕ ಜನರೆ ಮೊರೆ ಹೊಕ್ಕಿ ನಿಮ್ಮ ಪಾದಮನೋವಾಚ ಕಾಯದಲಿ ತ್ವರಿತದಲಿ ಎನ್ನ ಮನೋಭಿಷ್ಟೆಯಾಗಲಿ ಪುರಂದರನುತ ನಮ್ಮ ವಿಜಯವಿಠಲರೇಯನ ಚರಣ ಕಾಣುವ ಯೋಗ ತೋರಿಸಿಕೊಡುವುದು ||೫||
ಜತೆ:
ಜಗತ್ತಿನ ವ್ಯಾಪಾರ ನಿಮ್ಮಿಂದಾಗುವುದು ಪ |
ನ್ನಗಶಾಯಿ ವಿಜಯವಿಠಲನಲ್ಲಿ ಮನವಿರಲಿ ||
Comments
Post a Comment