INDUMUKHIYE NINNA SANDURUSHANA

 ಶ್ರೀ ಮೊದಲಕಲ್ಲು ಶೇಷದಾಸಾರ್ಯ ವಿರಚಿತ 
 (ಗುರುವಿಜಯವಿಟ್ಠಲ ಅಂಕಿತ) 

 ಶ್ರೀ ರಮಾದೇವಿ ಸ್ತೋತ್ರ ಸುಳಾದಿ 


ಇಂದುಮುಖಿಯೆ ನಿನ್ನ ಸಂದರುಶನದಿಂದಾ -
ನಂದವಾಯಿತು ಅರವಿಂದನಯನೆ
ಅಂದಿಗೆ ಗೆಜ್ಜೆ ಮೊದಲಾದಾಭರಣದಿಂದ
ಸುಂದರವಾದ ರೂಪದಿಂದ ಬಂದು
ಮಂದಹಾಸದಿಂದ ಮಾತನಾಡಿದರಿಂದ
ಬೆಂದು ಪೋದವೆನ್ನ ತ್ರಿವಿಧ ತಾಪ
ಇಂದಿರೇ ಈ ರೂಪದಿಂದ ತೋರಿದಳು
ಬಂಧುನೆನಿಪ ಲೋಕ ಗುರು ಸತಿಯೊ
ಕಂದು ಕಂಧರನಾದ ದೇವನ್ನ ರಾಣಿಯೊ
ಇಂದ್ರಾಣಿ ಮೊದಲಾದ ಜನರೋರ್ವಳೊ
ಮಂದಾಕಿನಿಯೊ ಇದರೊಳೊಂದರಿಯೇ ಕರುಣ -
ಸಿಂಧುವೆ ನಿನ್ನ ಪದಕೆ ನಮೊ ನಮೊ
ಮಂದರ್ಗೆ ಯೋಗ್ಯವಾದ ಮನುಷ್ಯ ದೇಹವನ್ನು
ಪೊಂದಿಪ್ಪ ಕಾರಣದಿಂದ ನಿನ್ನ
ಅಂದವಾದ ರೂಪ ಕ್ರೀಯಗಳನ್ನು ತಿಳಿದು
ವಂದಿಸಿ ವರಗಳು ಬೇಡಲಿಲ್ಲ
ಇಂದಿರೆ ರಮಣನ ಬಂಧಕ ಶಕುತಿಯು
ಮಂದನಾದವ ನಾನು ಮೀರುವೆನೇ
ಕಂದನ ಅಪರಾಧವೆಣಿಸದಲೇ ನೀನು
ಅಂದ ವಚನವನ್ನೆ ಸತ್ಯ ಮಾಡಿ
ಬಂಧುನೆನಿಸಿಕೊಂಬ ಗುರುವಿಜಯವಿಟ್ಠಲನ್ನ 
ಎಂದೆಂದಗಲದಿಪ್ಪ ವರವ ನೀಡು ॥ 1 ॥ 

 ಮಟ್ಟತಾಳ 

ಸಾನುರಾಗದಿ ಎನ್ನ ಸಾಮೀಪ್ಯವ ನೈದಿ
ಪಾಣಿದ್ವಯದಲ್ಲಿ ವೇಣು ಸ್ಪರಿಶ ಮಾಡಿ
ಏನು ಬೇಡುವೆ ಬೇಡು ನೀಡುವೆನೆಂತೆಂದು
ವಾಣಿಯಿಂದಲಿ ನುಡಿದು ಅನುಗ್ರಹಿಸಿದುದಕೆ
ಮಾನುಷನ್ನ ಜನಿತ ಅಜ್ಞಾನದಿಂದ
ಜ್ಞಾನನಿಧಿಯೆ ನಿನ್ನ ಪದದ್ವಂದ್ವಕೆ ನಮಿಸಿ
ಮಾನಸಿನಾಪೇಕ್ಷೆ ವಿವರಿಸಿ ಬಿನ್ನೈಸಿ
ಪೂರ್ಣ ಮಾಡು ಯೆಂದು ವರಗಳ ಬೇಡದಲೆ
ಹೀನ ಮನೋಭಾವ ಮಾಡಿದೆ ಹೇ ಜನನಿ
ಧೇನುವಿಗೆ ವತ್ಸ ಮಾಡಿದ ಅಪಚಾರ
ತಾನೆಣಿಸಿ ಅದರ ಸಾಕದೆ ಬಿಡುವದೆ
ಮಾನನಿಧಿಯೆ ಎನ್ನ ಅನುಚಿತವೆಣಿಸದಲೆ
ಏನು ಬೇಡಿದ ವರವ ನೀಡುವೆನೆಂತೆಂದ
ವಾಣಿ ಸತ್ಯ ಮಾಡು ಅವ್ಯವಧಾನದಲಿ
ಜ್ಞಾನಪೂರ್ಣ ಗುರುವಿಜಯವಿಟ್ಠಲರೇಯನ 
ಪ್ರೇರಣೆಯಿಂದಲ್ಲಿ ಪ್ರಾರ್ಥಿಸುವೆನು ನಿನ್ನ ॥ 2 ॥ 

 ತ್ರಿವಿಡಿತಾಳ 

ನಿನ್ನನುಗ್ರಹದಿಂದ ಧನ ಮೊದಲಾದ ವಸ್ತು
ತನ್ನಿಂದ ತಾನೆ ಬಂದು ಒದಗುತಿರೆ
ಇನ್ನಿದಕ್ಕೆ ನಾನು ನಿನ್ನ ಪ್ರಾರ್ಥಿಪೊದಿಲ್ಲ
ಬಿನ್ನಪವನು ಉಂಟು ಗ್ರಹಿಸಬೇಕು 
ಅನಂತ ಜನುಮದ ಪುಣ್ಯ ಪ್ರಭಾವದಿಂದ
ಘನ್ನ ಮಹಿಮನಾದ ಪುರುಷನೋರ್ವ
ಕ್ಷಣವಗಲದಿಪ್ಪ ಆಪ್ತನಾದವನೆನಿಸಿ
ಎನ್ನ ವಿರಹಿತವಾದ ಸ್ಥಾನವನ್ನು
ಕಣ್ಣಿಲಿ ನೋಡಲಾರೆನೆಂದು ನುಡಿದವನ್ನ
ಎನ್ನ ದುರ್ಭಾಗ್ಯದಿಂದ ಅಗಲಿ ನಾನಾ
ಬನ್ನ ಬಡುತಲಿಪ್ಪೆ ನಿಮಿಷ ಒಂದ್ಯುಗವಾಗಿ
ಮನ್ನಿಸಿ ಮನಕೆ ತಂದು ಪೂರ್ವದಂತೆ
ಮನ್ಮನದಲಿ ತೋರೊ ವ್ಯವಧಾನ ಮಾಡದಲೆ
ಇನ್ನಿದೆ ಬೇಡುವೆನೇ ಜನ್ನನೀಯೇ
ನಿನ್ನಿಂದ ನುಡಿದಂಥ ವಾಕ್ಯ ಸಫಲ ಮಾಡಿ
ಮನ್ಮನೋರಥವನು ಪೂರ್ಣ ಮಾಡು ಆ -
ಪನ್ನರ ರಕ್ಷಿಸುವ ಬಿರಿದು ನಿನಗೆ ಉಂಟು
ಸನ್ನುತಿಸಿ ಬೇಡಿಕೊಂಬೆ ಗುಣನಿಧಿಯೇ
ಪನ್ನಂಗತಲ್ಪ ಗುರುವಿಜಯವಿಟ್ಠಲರೇಯ 
ನಿನ್ನ ವಾಕ್ಯ ವೊಹಿಪ ಸರ್ವಕಾಲ ॥ 3 ॥ 

 ಅಟ್ಟತಾಳ 

ಕರಣಗಳಲಿ ಹರಿ ವ್ಯಾಪಕನೆಂತೆಂಬ
ಪರಿಯನ್ನು ತಿಳಿದಿಪ್ಪ ನರ ನುಡಿದ ವಾಕ್ಯ
ಪರಮೇಷ್ಠಿ ಮೊದಲಾದ ಸುರರು ಸಹಿತನಾದ
ಸಿರಿಪತಿ ವೊಹಿಸುವನೆಂದು ಪೇಳುತಲಿರೆ
ಕರಣ ಮಾನಿಗಳಾದ ಸುರರಿತ್ತ ವರಗಳ
ಹರಿ ಸತ್ಯ ಮಾಡುವನೆಂಬದಚ್ಚರವೇನೊ
ಶರಣನ್ನ ಮನೋರಥ ಪೂರ್ಣ ಮಾಡುವದಕ್ಕೆ
ಕೊರತೆ ನಿನಗಾವದು ಕೋಮಲಾಂಗಿಯೆ ನಿನ್ನ
ಚರಣ ದ್ವಂದ್ವಕೆ ನಮಿಸಿ ಶರಗೊಡ್ಡಿ ಬೇಡುವೆ
ತ್ವರಿತದಿಂದಲಿ ಈ ವರವನ್ನೆ ಪಾಲಿಸು
ಸುರಪಕ್ಷಪಾಲ ಗುರುವಿಜಯವಿಟ್ಠಲ ನಿಮ್ಮ
ಕರವಶನಾಗಿಪ್ಪ ಆವಾವ ಕಾಲದಲಿ ॥ 5 ॥ 

 ಆದಿತಾಳ 

ಆವಾವ ಜನ್ಮದಲ್ಲಿ ಅರ್ಚಿಸಿದೆ ನಿನ್ನ
ಆವಾವ ಕಾಲದಲ್ಲಿ ಅನುಗ್ರಹಿಸಿದ ವರವು
ಈ ವಿದ್ಯಮಾನವಾದ ಜನುಮದಲೊಮ್ಮೆಗನ್ನ
ದೇವಿಯೇ ನಿನಪಾದ ಸಾರಿದವನಲ್ಲ
ಗೋವತ್ಸ ನ್ಯಾಯದಿಂದ ನಿನಗೆ ನೀನೆ ಬಂದು
ಆವದು ಬೇಡಿದ ವರಗಳ ನೀವೆನೆಂದು
ಸುವಾಣಿಯಿಂದ ಎನ್ನ ಆದರಿಸಿದಿ ನಿನ್ನ
ಔದಾರ್ಯತನಕಿನ್ನು ಆವದಾವದು ಸಮ
ಶ್ರೀವತ್ಸಲಾಂಛನ ಗುರುವಿಜಯವಿಟ್ಠಲನ್ನ 
ಭಾವದಿಂದಲಿ ನೋಳ್ಪ ಭಾಗ್ಯವೇ ಪಾಲಿಸೇ ॥ 5 ॥ 

 ಜತೆ 

ನಿನ್ನ ದರುಶನದಿಂದ ಅನಿಷ್ಟವು ನಾಶ
ಘನ್ನ ಇಷ್ಟ ರೂಪ ಗುರುವಿಜಯವಿಟ್ಠಲ ಪ್ರಾಪ್ತ ॥

Comments

Popular posts from this blog

Kaksha Taratamya