PATIYA PADAKKE ERAGI SUDHAMA CHARITRE

ಪತಿಯ ಪಾದಕ್ಕೆರಗಿ ಮತಿ ಬೇಡಿ ಪಾರ್ವತಿ | 
ಸುತಗೆ ವಂದನೆಯ ಮಾಡಿದಳು ||
ಅತಿ ಭಕ್ತಿಯಿಂದಲಿ ಸ್ತುತಿಸುವ ಜನರಿಗೆ ಸ- |
ದ್ಗತಿಯಾಗಲೆನುತ ಪೇಳಿದಳು || ೧ ||

ಸುಧಾಮನೆಂಬೋರ್ವ ಸೂಕ್ಷ್ಮದ ಬ್ರಾಹ್ಮಣ |
ಹೊದಿಯಲಿಕ್ಕಿಲ್ಲ ಆಶನವಿಲ್ಲ ||
ಗದಗದ ನಡುಗುತ ಮಧುರ ಮಾತಾಡುತ |
ಸದನದೊಳಿರುತಿದ್ದನಾಗ || ೨ ||

ಪ್ರಾತಃ ಕಾಲದಲ್ಲೆದ್ದು ನಿತ್ಯ ಕರ್ಮವ ಮುಗಿಸಿ | 
ನಾಥನ ಧ್ಯಾನ ಮಾಡುತಲಿ ||
ಪಾತ್ರರ ಮನೆಗ್ಹೋಗಿ ಯಾಚನೆಗಳ ಮಾಡಿ | ಗ್ರಾಸ
ತರುವನು ಮುಷ್ಟಿ ತುಂಬ || ೩ ||

ಪತಿವೃತೆ ಹೆಂಡತಿ ಪತಿ ತಂದದ್ದೆ ಸಾಕೆಂದು | 
ಹಿತದಿಂದ ಪಾಕ ಮಾಡುವಳು ||
ಅತಿ ಭಕ್ತಿಯಿಂದಲಿ ಪತಿಗೆ ಭೋಜನ ಬಡಿಸಿ | 
ಮತಿವಂತಿ ಉಳಿದದ್ದುಂಬುವಳು || ೪ ||

ಹಸಿವೆ ತೃಷೆಗಳಿಂದ ಅತಿಕ್ಲೇಶವಾಗಿದ್ದು | 
ಪತಿಕೂಡೆ ಮಾತನಾಡಿದಳು ||
ಗತಿಯೇನು ನಮಗಿನ್ನು ಹಿತದವರ‍್ಯಾರಿಲ್ಲ ಸ- |
ದ್ಗತಿಯೇನೆನುತ ಪೇಳಿದಳು || ೫ ||

ಪೊಡವಿಯೊಳಗೆ ನಿಮ್ಮ ಒಡಹುಟ್ಟಿದವರಿಲ್ಲೆ | 
ಒಡನೆ ಆಡಿದ ಗೆಳೆಯರಿಲ್ಲೆ ||
ಕರೆದು ಕೂಡಿಸಿಕೊಂಡು ಬಿರುಸು ಮಾತ್ಹೆಳುವ | 
ಹಿರಿಯರು ದಾರಿಲ್ಲೆ ನಿಮಗೆ || ೬ ||

ಚಿಕ್ಕಂದಿಲ್ಲೋದಿಲ್ಲೆ ಹೆತ್ತವರ‍್ಹೆಳಿಲ್ಲೆ | 
ಉತ್ತಮ ಗುರುಗೋಳಿಲ್ಲೆನು
ಹೊತ್ತು ವೇಳೆಗಾಗೋ ಮಿತ್ರರು ಯಾರಿಲ್ಲೆ 
ಮತ್ತೆ ಕೇಳಿದಳು ಕ್ಲೇಶದಲಿ || ೭ ||

ಮಡದಿ ಮಾತನು ಕೇಳಿ ಮನದಲಿ ಯೋಚಿಸಿ |
ಹುಡುಗನಾಗಿರಲಿಕ್ಕೆ ಹೋಗಿ ||
ಗುರುಕುಲ ವಾಸದಲಿ ಹರಿ ನಾವು ಓದಿದ್ದು | 
ಹರಿ ಹೊರ್ತು ಮತ್ತೊಬ್ಬರಿಲ್ಲಾ || ೮ ||

ಇನ್ನೊಬ್ಬರೇತಕೆ ಅನ್ಯರಪೇಕ್ಷೇಕೆ | 
ಮನ್ನಿಸಿ ಹೋಗಿ ಬರ‍್ರೆಂದಳು ||
ಇನ್ನೇನು ಕೊಡತಿಯೆ ಹರಿ ಮುಂದೆ ಇಡಲಿಕ್ಕೆ | 
ಚೆನ್ನಾಗಿ ಕೇಳಿದನಾಗ || ೯ ||

ಗಾಬರಿಯಾದಳು ಸಾಗಿ ತಾ ನಡೆದಳು | 
ಬೇಗ ತಂದಳು ಅವಲಕ್ಕಿ ||
ಬಾಗಿ ವಸ್ತ್ರದೊಳು ಬೇಗ ಕಟ್ಟಿಕೊಟ್ಟು | 
ಹೋಗಿ ಬರ‍್ರೆನುತ ಪೇಳಿದಳು || ೧೦ ||

ಅಂಗಳವನು ಬಿಟ್ಟು ಮುಂದಕೆ ಬಂದನು | 
ಹಂಗ ಹಾರುವುದು ಎಡಕೆ ||
ಮಂಗಳವಾಗುವುದು ರಂಗನ ದರುಶನ |
ಸಂದೇಹವಿಲ್ಲದಾಗುವುದು || ೧೧ ||

ಬಾಗಿಲವನು ಬಿಟ್ಟು ಸಾಗಿ ಮುಂದಕೆ ಬರಲು | 
ಕಾಗಿ ಹಾರ‍್ಹೋದವು ಬಲಕೆ ||
ಆಗುವುದು ನಮಗಿನ್ನು ಆಗುವುದು ಶುಭ ಚಿನ್ಹ |
ಆಗುವುದು ಹರಿ ಕೃಪೆಯಿಂದ || ೧೨ ||

ಹೀಗೆಂದ ಬ್ರಾಹ್ಮಣ ಮುಂದಕೆ ನಡೆದನು | 
ಕಂಡನು ಕಮಲ ಪುಷ್ಪಗಳ ||
ರಂಗನ ಹೆಂಡರಿಗೆ ಹೆರಳಿಗೆ ಬೇಕೆಂದು |
ತೆಗೆದುಕೊಂಡನು ಕಮಲ ಪುಷ್ಪಗಳ || ೧೩ ||

ಹರಿಯುವ ಜಲವೆಲ್ಲ ಹರಿಯಭಿಷೇಕವೆಂ- | 
ದ್ಹರುಷದಲಿ ತುಂಬಿಕೊಂಡು ||
ಕರದಲ್ಲಿ ಹಿಡಕೊಂಡು ಪುರದ ಬಾಗಿಲ ಮುಂದೆ | 
ಹರಿ ಹ್ಯಾಗೆ ದೊರಕುವ ನೆಂದ || ೧೪ ||

ನಿಂತನು ಬ್ರಾಹ್ಮಣನ ಅನಂತ ರೂಪದಿ ಧ್ಯಾನ | 
ಅಂತ ರಂಗದಲಿ ಮಾಡುತಲಿ ||
ಸಂತೋಷದಿಂದಲಿ ಧರಿಸಿದ ದಶರೂಪ- |ದಿಂದ
ಬಂದೆನ್ನ ಕಾಯೆಂದ || ೧೫ ||

ಹರಕು ವಸ್ತ್ರವನುಟ್ಟು ಹರಿ ಧ್ಯಾನ ಮಾಡುವ | 
ವಿಪ್ರನ ಕಂಡು ಚಾರಕರು ||
ಬರಬೇಡಿರೊಳಗೆ ಹಿರಿಯರಪ್ಪಣೆಯಿಲ್ಲ | 
ತಿರುಗಿ ಹೋಗೆನುತ ಹೇಳಿದರು || ೧೬ ||

ಅಂದ ಮಾತನು ಕೇಳಿ ಅಂಜಿದ ಬ್ರಾಹ್ಮಣ |
ಇಂದಿರಾರಮಣಗ್ಹೇಳೆಂದ ||
ಹೆಸರು ಸುಧಾಮನಂತೆ ಹಸಿದು ಬಂದಾರೆಂದು |
ವಸುದೇವ ತನಯಗ್ಹೇಳಿದರು || ೧೭ ||

ಕೇಳಿದ ಹರಿಯೆದ್ದು ಬಹಳ ಹರುಷದಿಂದ | 
ಬೇಗನೆ ಕರೆತನ್ನಿರವನ ||
ಹೋಗು ಹೋಗೆಂದರೆ ಸಾಗಿ ಮುಂದಕೆ ಬರಲು | 
ಬಾಗಿಲಿಗೆ ಬಂದ ಸುಧಾಮ || ೧೮ ||

ಬಂದ ಭಕ್ತನ ನೋಡಿ ಆನಂದದಿಂದೆದ್ದು | 
ವಂದಿಸಿ ಆಸನವ ಹಾಕಿದರು ||
ಚಂದದಿಂದಲಿ ಕರವ ಹಿಡಿದು ಮಾತಾಡುತ | 
ಬಂದ ಕಾರಣವ ಕೇಳಿದರು || ೧೯ ||

ಮಂದಗಮನೆ ಸಹಿತ ತಂದ ಉದಕದಿಂದ |
ಚಂದದಿಂದಲಿ ಪಾದ ತೊಳೆದು ||
ಗಂಧ ಕೇಶರ ಹಚ್ಚಿ ಚೆಂದ ಚಾಮರದಿಂದ | 
ಅಂದದಿ ಗಾಳಿ ಬೀಸಿದರು || ೨೦ ||


ಹಸಿದು ಬಂದಾರೆಂದು ಹಸಿವೆಗೆ ತಕ್ಕಂಥ | 
ಹಸನಾದ ಹಣ್ಣು ಸಕ್ಕರೆಯು ||
ಕುಸುಮ ನಾಭನು ತಾನು ಪನ್ನೀರು ತಂದೀಡೆ | 
ಉಂಡು ಕೈತೊಳೆದ ಸುಧಾಮ || ೨೧ ||

ಮಂದರಧರಗಿನ್ನು ಸುಂದರ ಸತಿಯರು | 
ತಂದರು ತಬಕ ವಿಳ್ಯವನು ||
ಇಂದಿರೆರಮಣನು ಬಂದ ಸುಧಾಮನು | 
ಚಂದದಿ ಮೆಲೆದರು ವಿಳ್ಯವನು || ೨೨ ||

ಶ್ರಮ ಬಹಳವಾಗಿದೆ ಶ್ರಮಿಸಿಕೊಳ್ಳಿರೆಂದು | 
ಸೆಳೆ ಮಂಚ ತಂದ್ಹಾಕಿದರು ||
ಶಾಲು ಸಕಲಾತಿಯು ಮೇಲಾದ ಹಾಸಿಗೆ | 
ಮೇಲೆ ಮಲಗಿದನು ಸುಧಾಮ || ೨೩ ||

ಅಂದಿನ ರಾತ್ರಿಯಲಿ ಮಂದಗಮನೇಯರ ಬಿಟ್ಟು |
ಬಂದು ಮಲಗಿದನು ಶ್ರೀಹರಿಯು ||
ಹಿಂದಿನ ವೃತ್ತಾಂತ ಒಂದೊಂದು ಸ್ಮರಿಸುತ | 
ಆನಂದದಿ ಹರಿಯು ಸುಧಾಮ || ೨೪ ||

ಅಂದಿನ ಸ್ನೇಹವು ಇಂದೇಕೆ ನೆನಪಾಯ್ತು |
ಬಂದೀರಿ ಬಹುದಿನಕೆಂದ ||
ಹೆಂಡತಿ ಮಕ್ಕಳು ಇಹರೇನು ನಿಮಗೆಂದು | 
ಇಂದಿರೆ ರಮಣ ಕೇಳಿದನು || ೨೫ ||

ಹೆಂಡತಿ ಕಳುಹಿದಳು ರಂಗನ ದರುಷನ | 
ಕೊಂಡು ಬಾರೆನುತ ಪೇಳಿದಳು ||
ತಂದದ್ದು ಕೊಡಲಿಕ್ಕೆ ಸಂದೇಹವೇತಕ್ಕೆ | 
ತಂಡುಲ ಹಿಡಿದು ಜಗ್ಗಿದನು || ೨೬ ||

ಮುಷ್ಟಿತುಂಬವಲಕ್ಕಿ ಮುಕ್ಕಿದ ಹರಿ ಬೇಗ | 
ನಕ್ಕರು ಸತಿಯರೆಲ್ಲ ||
ಇಷ್ಟೇ ಸಾಕು ಎಂದು ಗಟ್ಯಾಗಿ ಕೈ ಹಿಡಿಯೆ | 
ಕೊಟ್ಟನು ಭಕ್ತನಿಗೆ ಐಶ್ವರ್ಯ || ೨೭ ||

ಹದಿನಾರು ಸಾವಿರ ಚದುರೆಯರ ಕರೆಸಿದ | 
ಕೊಡಿಸಿದೆಲ್ಲರಿಗೆ ತಂಡುಲವ ||
ಉಳಿಸಿದ ಅವಲಕ್ಕಿ ಉಣಲಿಕ್ಕೆ ಮಾರ್ಗಕ್ಕೆ | 
ಬೇಕೆಂದು ಬಿಗಿದು ಕಟ್ಟಿದರು || ೨೮ ||

ರನ್ನದ ಬಾಗಿಲಿಗೆ ಚಿನ್ನದ ಚೌಕಟ್ಟು | 
ಹೊನ್ನ ಹೊಸ್ತಲವ ನಿರ್ಮಿಸಿದ ||
ರನ್ನ ಮಾಣಿಕ ಬಿಗಿದ ತೊಲಿ ಕಂಬ ಗಿಳಿಬೋದು |
ಪನ್ನಗಶಯನ ನಿರ್ಮಿಸಿದ || ೨೯ ||


ಇರಿರಿ ನಾಲ್ಕುದಿವಸ ತ್ವರೆ ಯಾಕೆ ಮಾಡುವಿರಿ | 
ಇರಲಿಕ್ಕೆ ಬಾರದೆಯೆಂದಾ ||
ನೆರೆ ಹೊರೆ ಯಾರಿಲ್ಲ ತರುಣಿಯೊಬ್ಬಳಿಹಳು | 
ಇರಲಿ ನಾ ಹೇಗೆ ಪೇಳೆಂದ || ೩೦ ||

ಪಾದಕೆ ಎರಗಿ ತಾ ಸಾಗಿ ಮುಂದಕೆ ಬಂದ | 
ಬಾಗಿಲಿಗೆ ಬಂದ ಸುಧಾಮ ||
ಹೋಗಿರಿ ಹಿಂದಕೆ ಹೋಗಿ ಬರುತೇನೆನಲು | 
ಬಾಗಿ ಕೈ ಮುಗಿದ ಶ್ರೀಹರಿಯು || ೩೧ ||

ಮುಂದಕೆ ಬಂದನು ಇಂದೇನು ಕೊಡಲಿಲ್ಲ | 
ಹೆಂಡತಿಗೆ ಹೇಳಲೇನೆಂದ ||
ನಿಂತನು ಒಣಿಯಲಿ ಮಂದಿರ ಸಿಗಲಿಲ್ಲ | 
ಹೆಂಡತಿಯ ಕಂಡ ಸುಧಾಮ || ೩೨ ||


ಮಂದಿರವನ್ನೆಲ್ಲ ಕಂಡನು ಐಶ್ವರ್ಯ |
ಚಂದದಿಂದಾಭರಣ ಕಂಡ ||
ಇಂದಿರಾಪತಿಯನ್ನು ಕಂಡು ಬಂದುದರಿಂದ | 
ಬಂದಿತು ಸಕಲ ಸಂಪತ್ತು || ೩೩ ||

ರವಿವಾರ ಹಾಡಿದರೆ ರಾಜಕಾರ್ಯವಾಗುವುದು | 
ಬಂಜೆಗೆ ಮಕ್ಕಳಾಗುವವು ||
ಬರಡೆಮ್ಮೆ ಕರೆಯೋದು ಬಡತನ ಹಿಂಗುವುದು |
ಗುರುವಾರ ಹಾಡಿದವರಿಗೆ || ೩೪ ||

ಶ್ರೀನಿವಾಸನ ಧ್ಯಾನ ಮೌನದಿಂದಲಿ ಮಾಡಿ | 
ನಾನಾ ಸಂಪತ್ತು ಪಡೆದರು ||
ಅದರ ವಿಷಯ ತಿಳಿದು ಗತಿ ಮೋಕ್ಷ ಇರಲೆಂದು | 
ಶ್ರೀ ಹರಿ ಕೊಡು ದೇವ ಸಿರಿಯ || ೩೫ ||

ಇದು ಭಾಗವತವೆನ್ನಿ ಇದು ಭಾಗವತವೆನ್ನಿ | 
ಇದು ಭಾಗವತಕೆ ಕೀಲಗಳು |
ಇದಕೆ ಪ್ರಿಯನು ನಮ್ಮ ಪುರಂದರವಿಠ್ಠಲ | 
ಇದರಿಂದ ಮುಕ್ತಿ ಕೊಡುವನು || ೩೬ ||

Comments

Popular posts from this blog

Kaksha Taratamya