Chaturmasya Mahiti
ಚಾತುರ್ಮಾಸ
ಮನುಷ್ಯಮಾನದ ಒಂದು ವರ್ಷವು ದೇವತೆಗಳಿಗೆ ಒಂದು ದಿನ (ಅಹೋರಾತ್ರ). ಉತ್ತರಾಯಣವು ದೇವತೆಗಳ ಹಗಲು ಮತ್ತು ದಕ್ಷಿಣಾಯಣವು ರಾತ್ರಿ. ಸೂರ್ಯನ ಕರ್ಕರಾಶಿ ಪ್ರವೇಶದೊಂದಿಗೆ ದಕ್ಷಿಣಾಯಣವು ಪ್ರಾರಂಭವಾಗುತ್ತದೆ. ದಕ್ಷಿಣಾಯಣವು ಆರು ತಿಂಗಳುಗಳ ಕಾಲವಿರುತ್ತದೆ. ಈ ಕರ್ಕಮಾಸದಲ್ಲಿ ಬರುವ ಆಷಾಢ ಶುಕ್ಲ ಏಕಾದಶೀಯಿಂದ ನಾಲ್ಕು ತಿಂಗಳುಗಳಷ್ಟು ಕಾಲವನ್ನು ದೇವತೆಗಳು ನಿದ್ರಿಸುವ ಸಮಯವೆಂದು ಕರೆಯಲಾಗಿದೆ. ಈ ನಾಲ್ಕು ತಿಂಗಳುಗಳ ಕಾಲ ಆಚರಿಸಲಾಗುವ ವ್ರತವನ್ನು ಚಾತುರ್ಮಾಸ ವ್ರತವೆಂದು ಕರೆಯಲಾಗುತ್ತದೆ. ಚಾತುರ್ಮಾಸವು ಆಷಾಡ ಶುಕ್ಲ ಏಕಾದಶೀಯಿಂದ ಆರಂಭವಾಗುತ್ತದೆ ಮತ್ತು ಕಾರ್ತಿಕ ಶುಕ್ಲ ಏಕಾದಶೀ ಅಥವಾ ಪೌರ್ಣಮೆಯಂದು ಸಮಾಪನಗೊಳ್ಳುತ್ತದೆ.
ಆಷಾಢ ಶುಕ್ಲ ಏಕಾದಶೀಯಂದು ದೇವದೇವೋತ್ತಮನಾದ ಶ್ರೀಹರಿಯು ಕ್ಷೀರಸಾಗರದಲ್ಲಿ ಯೋಗನಿದ್ರೆಯಲ್ಲಿ ತೊಡಗುವುದರ ಪ್ರತೀಕವಾಗಿ ಹರಿಶಯನೋತ್ಸವ ಅಥವಾ ವಿಷ್ಣುಶಯನೋತ್ಸವವನ್ನು ಆಚರಿಸಲಾಗುತ್ತದೆ. ಈ ಏಕಾದಶೀಯನ್ನು ಶಯನೀ ಏಕಾದಶೀಯೆಂದು ಕರೆಯಲಾಗುತ್ತದೆ. ಕಾರ್ತೀಕ ಮಾಸದ ಶುಕ್ಲೈಕಾದಶೀಯಂದು ಪರಮಾತ್ಮನು ನಿದ್ರೆಯಿಂದ ಎಚ್ಚರಗೊಳ್ಳುವುದರಿಂದ ಅಂದು ಜಾಗರೋತ್ಸವ ಅಥವಾ ಪ್ರಬೋಧೋತ್ಸವವನ್ನು ಆಚರಿಸಲಾಗುತ್ತದೆ. ಈ ಏಕಾದಶೀಯನ್ನು ಉತ್ಥಾನ ಏಕಾದಶೀ ಅಥವಾ ಪ್ರಬೋಧಿನಿ ಏಕಾದಶೀ ಎಂದು ಕರೆಯಲಾಗುತ್ತದೆ.
ಚಾತುರ್ಮಾಸ ವ್ರತ ಎಲ್ಲರಿಗೂ ವಿಹಿತ- ಚಾತುರ್ಮಾಸ ವ್ರತವು ಮಹಾಪುಣ್ಯಪ್ರದವಾಗಿದ್ದು ಇದರ ಆಚರಣೆಯಿಂದ ಸರ್ವವಿಧ ಪಾಪರಾಶಿಗಳ ನಾಶವಾಗುತ್ತದೆ.
ಇದಂ ವ್ರತಂ ಮಹಾಪುಣ್ಯಂ ಸರ್ವಪಾಪಹರಂ ಶುಭಮ್ |ಸರ್ವಾಪರಾಧಶಮನಂ ಸರ್ವೋಪದ್ರವನಾಶನಮ್ |
ಈ ವ್ರತವು ಮಹಾಪುಣ್ಯಪ್ರದವಾಗಿದ್ದು ಎಲ್ಲ ಪಾಪಗಳನ್ನು ನಾಶ ಮಾಡುವಂತಹದ್ದಾಗಿದೆ, ಎಲ್ಲ ವಿಧವಾದ ಅಪರಾಧಗಳನ್ನು ಕ್ಷಮಿಸುವಂತಹದ್ದು, ಎಲ್ಲ ರೀತಿಯ ಉಪದ್ರವಗಳನ್ನು ನಾಶ ಮಾಡುವಂತಹದ್ದಾಗಿದೆ. ಈ ವ್ರತವನ್ನು ನಾಲ್ಕೂ ಆಶ್ರಮದ ಎಲ್ಲರೂ ಅವಶ್ಯವಾಗಿ ಆಚರಿಸಬೇಕು. ಚಾತುರ್ಮಾಸ ವ್ರತವು ನಿತ್ಯ ವ್ರತವಾಗಿದ್ದು ಎಲ್ಲ ವರ್ಣಾಶ್ರಮದವರಿಗೂ ವಿಹಿತವಾಗಿದೆ. ನಿತ್ಯ ವ್ರತವೆಂದರೆ ಕಡ್ಡಾಯವಾಗಿ ಪಾಲಿಸಬೇಕಾದಂತಹ ವ್ರತಗಳು, ಇವುಗಳನ್ನು ಬಿಟ್ಟಲ್ಲಿ ಪ್ರತ್ಯವಾಯವೆಂಬ ಮಹಾದೋSಷವು ಬರುತ್ತದೆಯೆಂದು ಧರ್ಮಶಾಸ್ತ್ರ ನಿರ್ಣಯವಿದೆ. ಚಾತುರ್ಮಾಸ ವ್ರತವು ಕೇವಲ ಬ್ರಾಹ್ಮಣ ಸ್ತ್ರಿಯರು, ಯತಿಗಳು-ಸನ್ಯಾಸಿಗಳು, ವಿಧವೆಯರು ಮಾತ್ರವೇ ಆಚರಿಸಬೇಕು, ಉಳಿದವರು ಆಚರಿಸಬಾರದು ಅಥವಾ ಆಚರಿಸದಿದ್ದರೆ ನಡೆಯುತ್ತದೆ – ಹೀಗೆಲ್ಲ ಅಜ್ಞಾನ ಮೂಲಕವಾದ ವಿಚಾರಗಳಿವೆ. ಧರ್ಮಶಾಸ್ತ್ರಗಳು ಈ ವ್ರತವನ್ನು ಪ್ರತಿಯೊಬ್ಬ ವೈದಿಕ-ಸನಾತನ ಧರ್ಮಾವಲಂಬಿಯನ್ನು ಕುರಿತು ಆದೇಶ ಮಾಡಿವೆ.
ನಾಲ್ಕು ತಿಂಗಳುಗಳ ಕಾಲ ವ್ರತನಿಷ್ಠನಾಗಿದ್ದು ಪ್ರತಿಯೊಬ್ಬ ಸನಾತನ ಧರ್ಮಾವಲಂಬಿಯಾದವನು ಪಶ್ಚಾತ್ತಾಪಪೂರ್ವಕ ತನ್ನ ಪಾಪರಾಶಿಗಳನ್ನು ಕಳೆದುಕೊಳ್ಳಲೆಂದೆ ಪ್ರತಿವಾರ್ಷಿಕವಾಗಿ ಈ ವ್ರತದ ಅನುಷ್ಠಾನವಿರುತ್ತದೆ.
ನಾರೀಭಿಶ್ಚ ನರೈರ್ವಾಽಪಿ ಚತುರಾಶ್ರಮವರ್ತಿಭಿಃ ||
ಬ್ರಾಹ್ಮಣಃ ಕ್ಷತ್ರಿಯೋ ವೈಶ್ಯಃ ಸ್ತ್ರಿಯಃ ಶೂದ್ರೋ ವ್ರತೀ ತಥಾ |
ಗೃಹೀ ವನಸ್ಥಃ ಕಟಿಚೋ ಬಹೂದಃ ಪರಮಹಂಸಕಃ |
ಎಲ್ಲ ಸ್ತ್ರೀಪುರುಷರು, ನಾಲ್ಕೂ ವರ್ಣದವರೂ (ಬ್ರಾಹ್ಮಣ-ಕ್ಷತ್ರೀಯ-ವೈಶ್ಯ-ಶೂದ್ರ), ನಾಲ್ಕೂ ಆಶ್ರಮದವರೂ (ಬ್ರಹ್ಮಚರ್ಯ-ಗ್ರಹಸ್ಥ-ವಾನಪ್ರಸ್ಥ-ಸನ್ಯಾಸ), ಎಲ್ಲ ಪ್ರಕಾರದ ಸನ್ಯಾಸಿಗಳು (ಕುಟೀಚರ-ಬಹೂದ-ಹಂಸ-ಪರಮಹಂಸ), ಇನ್ನಿತರ ಅನ್ಯ ವ್ರತಗಳನ್ನು ಮಾಡುತ್ತಿರುವವರು, ಎಲ್ಲರೂ ನಿತ್ಯವಾಸ ಈ ಚಾತುರ್ಮಾಸ್ಯ ವ್ರತವನ್ನು ಅವಶ್ಯವಾಗಿ ಆಚರಿಸಲೇಬೇಕು, ಇದನ್ನು ಆಚರಿಸದಿದ್ದರೆ ನರಕವು ತಪ್ಪಿದ್ದಲ್ಲ. ನಾಲ್ಕು ಮಾಸಗಳು – ನಾಲ್ಕು ವ್ರತಗಳು
ದ್ವಿತೀಯೇ ಮಾಸಿ ಕರ್ತವ್ಯಂ ದಧಿವ್ರತಮನುತ್ತಮಮ್ ||
ಪಯೋವ್ರತಂ ತೃತೀಯೇ ತು ಚತುರ್ಥೇ ತು ನಿಶಾಮಯ |
ದ್ವಿದಲಂ ಬಹುಬೀಜಂ ಚ ವರ್ಜಯೇತ್`ಶುದ್ಧಿಮಿಚ್ಛತಾ ||
ಮೊದಲನೇ ಮಾಸದಲ್ಲಿ ಶಾಕವ್ರತ, ಎರಡನೇ ಮಾಸದಲ್ಲಿ ದಧಿವ್ರತ, ಮೂರನೇಯ ಮಾಸದಲ್ಲಿ ಕ್ಷೀರವ್ರತ ಮತ್ತು ಕೊನೆಯ ನಾಲ್ಕನೇಯ ಮಾಸದಲ್ಲಿ ದ್ವಿದಲವ್ರತ, ನಿತ್ಯವಾದ ಈ ವ್ರತಗಳನ್ನು ಪಾಲಿಸಬೇಕು. ಚಾತುರ್ಮಾಸಕ್ಕೆ ಮಾಸಗಳ ಗಣನೆ ಶುಕ್ಲ ಏಕಾದಶೀಯಿಂದ ಮುಂದಿನ ಶುಕ್ಲ ಏಕಾದಶೀಯ ವರೆಗೆ. ಈ ವ್ರತಗಳನ್ನು ಆಚರಿಸುವುದೆಂದರೆ ಆಯಾ ಮಾಸಗಳಲ್ಲಿ ಅನುಕ್ರಮವಾಗಿ ಆಯಾ ವಸ್ತುಗಳನ್ನು ಸಂಕಲ್ಪಪೂರ್ವಕ ತ್ಯಾಗಮಾಡಬೇಕು.
ಶಾಕವ್ರತ – (ಆಷಾಢ ಶುಕ್ಲೈಕಾದಶೀಯಿಂದ ಶ್ರಾವಣ ಶುಕ್ಲೈಕಾದಶೀ) ಈ ವ್ರತದಲ್ಲಿ ಶಾಕಗಳನ್ನು ಎಂದರೆ ಎಲ್ಲ ರೀತಿಯ ತರಕಾರಿಗಳನ್ನು ಆಹಾರವಾಗಿ ಸ್ವೀಕರಿಸಬಾರದು. ಬೇರುಗಳು, ಎಲೆ, ಮೊಳಕೆ, ತುದಿ (ಮುಂಭಾಗ), ಹಣ್ಣುಗಳು, ದಂಟು, ತೊಗಟೆ, ಚಿಗುರು, ಹೂವು, ಸಿಪ್ಪೆ ಇವುಗಳನ್ನು ಶಾಕ ಎಂದು ಕರೆಯಲಾಗುತ್ತದೆ – ಇವುಗಳು ಈ ವ್ರತದಲ್ಲಿ ಅಸ್ವೀಕಾರ್ಯಗಳಾಗಿವೆ. ಎಂದರೆ ಎಲ್ಲ ಎಲೆ-ಕೋಸು ತರಕಾರಿಗಳು, ಮಸಾಲೆ ಪದಾರ್ಥಗಳು, ಹಣ್ಣುಗಳು, ಬೇರುಗಳು ಆಹಾರ ಪದಾರ್ಥವಾಗಿ ಈ ಮಾಸದಲ್ಲಿ ಸ್ವೀಕರಿಸಬಾರದು. ಅಗಸೆ, ತುಳಸಿ, ನೆಲ್ಲಿ, ಮಾವುಗಳು ಶಾಕಗಳಾಗಿದ್ದರೂ ವರ್ಜ್ಯವಲ್ಲ. ಅಂತೆಯೇ ಖರ್ಜೂರ, ಮೆಣಸುಗಳನ್ನು ಸಹ ಆಹಾರದಲ್ಲಿ ಬಳಸಬಹುದು.
ದಧಿವ್ರತ – (ಶ್ರಾವಣ ಶುಕ್ಲೈಕಾದಶೀಯಿಂದ ಭಾದ್ರಪದ ಶುಕ್ಲೈಕಾದಶೀ) ಈ ವ್ರತದಲ್ಲಿ ಒಂದು ತಿಂಗಳುಗಳ ಕಾಲ ಮೊಸರನ್ನು ತ್ಯಾಗಮಾಡಬೇಕು. ಮಜ್ಜಿಗೆಯು ಗ್ರಾಹ್ಯವಾಗಿದೆ.
ಕ್ಷೀರವ್ರತ – (ಭಾದ್ರಪದ ಶುಕ್ಲೈಕಾದಶೀಯಿಂದ ಆಶ್ವೀನ ಶುಕ್ಲೈಕಾದಶೀ) ಈ ವ್ರತದಲ್ಲಿ ಒಂದು ತಿಂಗಳುಗಳ ಕಾಲ ಹಾಲನ್ನು ತ್ಯಾಗಮಾಡಬೇಕು.
ದ್ವಿದಳವ್ರತ – (ಆಶ್ವೀನ ಶುಕ್ಲೈಕಾದಶೀಯಿಂದ ಕಾರ್ತಿಕ ಶುಕ್ಲೈಕಾದಶೀ) ಈ ವ್ರತದಲ್ಲಿ ಎಲ್ಲ ರೀತಿಯ ದ್ವಿದಳ ಧಾನ್ಯಗಳನ್ನು ತ್ಯಾಗಮಾಡಬೇಕು. ತೊಗರೆ, ಹುರುಳಿ, ಕಡಲೆ, ಅವರೆ, ಉದ್ದು ಮೊದಲಾದ ಒಡೆದಾಗ ಎರಡಾಗಿ ಭಾಗವಾಗುವ ಧಾನ್ಯಗಳು ದ್ವಿದಳ ಧಾನ್ಯಗಳಾಗಿವೆ.
ಮೇಲ್ಕಂಡ ಈ ವ್ರತಗಳು ಕಡ್ಡಾಯ-ನಿತ್ಯ ವ್ರತಗಳಾಗಿವೆ. ಈ ಮೇಲಿನ ವ್ರತಗಳಲ್ಲದೇ ಇನ್ನೂ ಅನೇಕ ಐಚ್ಛಿಕ ವ್ರತಗಳನ್ನು ಶಾಸ್ತ್ರಗಳಲ್ಲಿ ಹೇಳಲಾಗಿದೆ. (ಐಚ್ಛಿಕ ವಿಷಯವಾದುದರಿಂದ ವಿಸ್ತಾರಭಯದಿಂದ ಇಲ್ಲಿ ಬರೆಯುವುದಿಲ್ಲ, ಗ್ರಂಥಗಳಿಂದ, ಗುರು-ಹಿರಿಯರಿಂದ ತಿಳಿದುಕೊಳ್ಳಬಹುದು.) ಚಾತುರ್ಮಾಸದಲ್ಲಿ ಬರುವ ನಾಲ್ಕು ಮಾಸಗಳಾದ ಶ್ರಾವಣ, ಭಾದ್ರಪದ, ಅಶ್ವಯುಜ ಮತ್ತು ಕಾರ್ತಿಕ ಮಾಸಗಳಿಗೆ ಕ್ರಮವಾಗಿ ಪರಮಾತ್ಮನ ಶ್ರೀಧರ, ಹೃಷೀಕೇಶ, ಪದ್ಮನಾಭ ಮತ್ತು ದಾಮೋದರ ಈ ರೂಪಗಳು ಅಭಿಮಾನಿಗಳಾಗಿವೆ.
ಚಾತುರ್ಮಾಸದ ಸಂಕಲ್ಪಗಳು
ವಿಬುದ್ಧೇ ಚ ವಿಬುದ್ಧೇತ ಪ್ರಸನ್ನೋ ಮೇ ಭವಾಚ್ಯುತ ||
ಚತುರೋ ವಾರ್ಷಿಕಾನ್ ಮಾಸಾನ್ ದೇವ ದೇವ ಜಗತ್ಪತೇ |
ನಿರ್ವಿಘ್ನಂ ಸಿದ್ಧಿಮಾಯಾತು ಪ್ರಸಾದಾತ್ತವ ಕೇಶವ ||
ಗ್ರಹೀತೇಽಸ್ಮಿನ್ ವ್ರತೇ ದೇವ ದೇವ ಪಂಚತ್ವಂ ಯದಿ ಮೇ ಭವೇತ್ |
ಶಾಕವ್ರತ ಸಂಕಲ್ಪ– (ಆಷಾಢ ಶುಕ್ಲ ದ್ವಾದಶೀಯಿಂದ)
ನಿರ್ವಿಘ್ನಂ ಸಿದ್ಧಿಮಾಯಾತು ಪ್ರಸಾದಾತ್ತೇ ರಮಾಪತೇ ||
ವಾಸುದೇವ ಶುಭೇ ಮಾಸೇ ಶಾಕವ್ರತಮನುತ್ತಮಮ್ |
ಸಮರ್ಪಣ (ಶ್ರಾವಣ ಶುಕ್ಲ ದ್ವಾದಶೀಯಂದು)
ದಧಿವ್ರತ ಸಂಕಲ್ಪ– (ಶ್ರಾವಣ ಶುಕ್ಲ ದ್ವಾದಶೀಯಿಂದ)
ಇಮಂ ಕರಿಷ್ಯೇ ನಿಯಮಂ ನಿರ್ವಿಘ್ನಂ ಕುರು ಕೇಶವ ||
ಸಂಕರ್ಷಣಾರವಿಂದಾಕ್ಷ ಕರಿಷ್ಯೇಽಹಂ ದಧಿವ್ರತಮ್ |
ಸಮರ್ಪಣ- (ಭಾದ್ರಪದ ಶುಕ್ಲ ದ್ವಾದಶೀಯಂದು)
ಕ್ಷೀರವ್ರತ ಸಂಕಲ್ಪ– (ಭಾದ್ರಪದ ಶುಕ್ಲ ದ್ವಾದಶೀಯಿಂದ)
ನಿರ್ವಿಘ್ನಂ ಸಿದ್ಧಿಮಾಯಾತು ಪ್ರಸಾದಾತ್ತೇ ರಮಾಪತೇ ||
ಪ್ರದ್ಯುಮ್ನ ತವ ತುಷ್ಟ್ಯರ್ಥಂ ಪ್ರೋಷ್ಟಪದ್ಯಾಂ ತೃತೀಯಕೇ |
ಸಮರ್ಪಣ- (ಆಶ್ವಯುಜ ಶುಕ್ಲದ್ವಾದಶೀಯಂದು)
ಇಷ್ಟದೋ ಭವ ಸರ್ವೇಶ ಗೃಹಿತ್ವಾ ತು ಪಯೋವ್ರತಮ್ ||
ಇಮಂ ಕರಿಷ್ಯೇ ನಿಯಮಂ ನಿರ್ವಿಘ್ನಂ ಕುರು ಕೇಶವ ||
ಅನಿರುದ್ಧಂ ಸುರೈರ್ವಂದ್ಯ ದ್ವಿದಳವ್ರತಮುತ್ತಮಮ್ |
ಸಮರ್ಪಣ- (ಕಾರ್ತಿಕ ಶುಕ್ಲ ದ್ವಾದಶೀಯಂದು)
ಚಾತುರ್ಮಾಸ ವ್ರತ ಸಮರ್ಪಣ ಮಂತ್ರ– (ಕಾರ್ತಿಕ ಶುಕ್ಲ ದ್ವಾದಶೀಯಂದು)
ವರಾಹ ಪುರಾಣದಲ್ಲಿ ಚಾತುರ್ಮಾಸ ಮಹಾತ್ಮೆಯು ಬಹಳ ವಿಸ್ತಾರವಾಗಿ ನಿರೂಪಿತವಾಗಿದೆ. ಈ ಮಹಾತ್ಮೆಯಲ್ಲಿ ಅನೇಕ ಬೋಧಪ್ರದ ಕಥಾಪ್ರಸಂಗಗಳು ಬರುತ್ತವೆ.
Comments
Post a Comment